ಹೈದರಾಬಾದ್:2017 ರಲ್ಲಿ ದಾಖಲಾದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ತೆಲಂಗಾಣದ ಸ್ಥಳೀಯ ನ್ಯಾಯಾಲಯವು ಸೋಮವಾರ ಜಾಮೀನು ರಹಿತ ವಾರಂಟ್ (ಎನ್ಬಿಡಬ್ಲ್ಯು) ಹೊರಡಿಸಿದೆ.
ಸಂಸದರು / ಶಾಸಕರ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿಚಾರಣೆಗಾಗಿನ ವಿಶೇಷ ನ್ಯಾಯಾಲಯ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಎಐಐಎಂಐಎಂ ಸಲ್ಲಿಸಿದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣ ಎನ್ಬಿಡಬ್ಲ್ಯೂ ಹೊರಡಿಸಿದೆ.
ಎಐಐಎಂಐಎಂ ನಾಯಕ ಎಸ್ ಎ ಹುಸೇನ್ ಅನ್ವರ್ ಅವರು ಕಾಂಗ್ರೆಸ್ ಮುಖಂಡರ ವಿರುದ್ಧ ಅರ್ಜಿ ಸಲ್ಲಿಸಿದ್ದರು, ದಿಗ್ವಿಜಯ್ ಸಿಂಗ್ ತಮ್ಮ ಹೇಳಿಕೆಯ ಮೂಲಕ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರಿಗೆ ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ದಿಗ್ವಿಜಯ್ ಸಿಂಗ್, ಹೈದರಾಬಾದ್ ಸಂಸದರಾದ ಓವೈಸಿ ಪಕ್ಷವು ಆರ್ಥಿಕ ಲಾಭಕ್ಕಾಗಿ ಬೇರೆ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದಿದ್ದರು.
ಅರ್ಜಿದಾರರ ಪರ ವಕೀಲ ಮೊಹಮ್ಮದ್ ಆಸಿಫ್ ಅಮ್ಜಾದ್ ಅವರು ದಿಗ್ವಿಜಯ್ ಸಿಂಗ್ ಮತ್ತು ಉರ್ದು ದಿನಪತ್ರಿಕೆಯ ಸಂಪಾದಕ ಇಬ್ಬರಿಗೂ ನೋಟೀಸ್ ಕಳುಹಿಸಿದ್ದಾರೆ, ಅದು ಲೇಖನ ಪ್ರಕಟಿಸಿದವರೂ ಕ್ಷಮೆಯಾಚಿಸಬೇಕು ಎಂದು ಕೋರೊದೆ.ಆದರೆ ಇದಕ್ಕೆ ತಕ್ಕ ಉತ್ತರ ಬಾರದ ಹಿನ್ನೆಲೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೊನೆಯ ವಿಚಾರಣೆಯ ದಿನಾಂಕ, ಫೆಬ್ರವರಿ 22 ರಂದು ದಿಗ್ವಿಜಯ್ ಸಿಂಗ್ ಮತ್ತು ಸಂಪಾದಕ ತನ್ನ ಮುಂದೆ ಹಾಜರಾಗುವಂತೆ ನ್ಯಾಯಾಲಯವು ನಿರ್ದೇಶಿಸಿತ್ತು. ಪತ್ರಿಕಾ ಸಂಪಾದಕ ನ್ಯಾಯಾಲಯಕ್ಕೆ ಹಾಜರಾದರೂ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣ ಅವರ ವಿರುದ್ಧ ವಾರಂಟ್ ಜಾರಿಯಾಗಿದೆ.
ವೈದ್ಯಕೀಯ ಕಾರಣಗಳಿಂದ ಹಾಜರಾಗುವುದರಿಂದ ವಿನಾಯಿತಿ ಕೋರಿ ದಿಗ್ವಿಜಯ್ ಸಿಂಗ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು, ಆದರೆ ನ್ಯಾಯಾಲಯ ಅದನ್ನು ವಜಾಗೊಳಿಸಿ ಎನ್ಬಿಡಬ್ಲ್ಯೂ ಹೊರಡಿಸಿದೆ ಎಂದು ಆಸಿಫ್ ಅಮ್ಜಾದ್ ಹೇಳಿದ್ದಾರೆ. ಇದರ ಮುಂದಿನ ವಿಚಾರಣೆ ಮಾರ್ಚ್ 8ರಂದು ನಡೆಯಲಿದೆ. ಈ ನಡುವೆ ವಿಚಾರಣೆ ರದ್ದು ಕೋರಿ ಸಿಂಗ್ ಈಗಾಗಲೇ ಹೈಕೋರ್ಟ್ಗೆ ಸ್ಟೇ ಎಕ್ಸ್ಟೆನ್ಶನ್ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಸಿಂಗ್ ಪರ ವಕೀಲರು ತಿಳಿಸಿದ್ದಾರೆ.