ಕಠ್ಮಂಡು: ಭೂತಾನ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದ್ದು, ಮೂರು ಭಾರತೀಯ ಕಾರ್ಮಿಕರು ಮೃತರಾಗಿದ್ದಾರೆ. ಇನ್ನೂ ಕೆಲ ಕಾರ್ಮಿಕರು ಕಾಣೆಯಾಗಿರುವುದಾಗಿ ಹೇಳಲಾಗಿದೆ.
ರಾಜಧಾನಿ ತಿಮ್ಫುವಿನ ನೈಋತ್ಯ ಭಾಗದಲ್ಲಿ 60 ಕಿಮೀ ದೂರದಲ್ಲಿ ನಿರ್ಮಾಣವಾಗುತ್ತಿರುವ ವಾಂಗ್ಚು ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸೇತುವೆಯು ಭಾಗಶಃ ನಿರ್ಮಾಣವಾಗಿತ್ತು. ಒಂಬತ್ತು ಕಾರ್ಮಿಕರು ಸೇತುವೆಯ ಮೇಲೆ ನಿಂತು ಕೆಲಸ ಮಾಡುತ್ತಿದ್ದರು. ಏಕಾಏಕಿ ಕುಸಿದು ಬಿದ್ದಿರುವುದಕ್ಕೆ ಕಾರಣವಿನ್ನು ತಿಳಿದುಬಂದಿಲ್ಲ. ಈಗಾಗಲೇ ಮೂರು ಶವಗಳು ಪತ್ತೆಯಾಗಿವೆ. ಆ ಮೂವರು ಭಾರತೀಯರೂ ಎನ್ನಲಾಗಿದೆ.
ಮೃತರಾದ ಕಾರ್ಮಿಕರಿಗೆ ಪ್ರಧಾನಿ ಲೋಟೇ ತ್ಸೆರಿಂಗ್ ಸಂತಾಪ ಸೂಚಿಸಿದ್ದಾರೆ. ಕಾಣೆಯಾದವರು ಸುರಕ್ಷಿತವಾಗಿ ಪತ್ತೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ. ಭೂತಾನ್ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಹಾ ಜಿಲ್ಲೆಯನ್ನು ಪಾರೊದೊಂದಿಗೆ ಸಂಪರ್ಕಿಸುವ ಗುರಿಯನ್ನು ಈ ಸೇತುವೆ ಹೊಂದಿತ್ತು.