ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಹೊಸ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವರ್ಚುವಲ್ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿದ್ರು. 18,000 ಕೋಟಿ ರೂಪಾಯಿಯನ್ನು 9 ಕೋಟಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದ್ರು. ಇದು ಏಳನೇ ಕಂತಿನ ಸಹಾಯಧನ ಪಾವತಿಯಾಗಿದೆ. ಇದೇ ವೇಳೆ ಆರು ರಾಜ್ಯಗಳ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನೂ ಸರ್ಕಾರ ಆಯೋಜಿಸಿದ್ದು, ಅದರ ನೇರ ಪ್ರಸಾರ ಸದ್ಯ ಚಾಲ್ತಿಯಲ್ಲಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಪ್ರಧಾನಿಯವರನ್ನು ಸ್ವಾಗತಿಸಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಇದಾಗಿ ದೇಶದ ಕೃಷಿಕರನ್ನು ಉದ್ದೇಶಿ ಮಾತನಾಡಿದ ಪ್ರಧಾನಿ ಮೋದಿಯವರ ಭಾಷಣದ ಸಾರ ಇಲ್ಲಿದೆ.
ಇವತ್ತು ಕೃಷಿಕರ ಖಾತೆಗಳಿಗೆ ನೇರವಾಗಿ 18,000 ಕೋಟಿ ರೂಪಾಯಿ ಜಮೆ ಆಗಿದೆ. ಮಧ್ಯವರ್ತಿಗಳ ಹಂಗಿಲ್ಲ, ಕಮಿಷನ್ ಕೊಡಬೇಕಾದ ಕಿರಿಕಿರಿಯೂ ಇಲ್ಲ. ಕೇಂದ್ರದ ಯೋಜನೆಗಳು ಬಂಗಾಳದ ರೈತರನ್ನು ತಲುಪುತ್ತಿಲ್ಲ. ಪಶ್ಚಿಮ ಬಂಗಾಳವೊಂದೇ ರಾಜ್ಯ ರೈತರಿಗೆ ಕೇಂದ್ರದ ಯೋಜನೆಗಳನ್ನು ತಲುಪದಂತೆ ತಡೆ ಹಿಡಿದಿರುವಂಥದ್ದು.
ಮಮತಾ ಬ್ಯಾನರ್ಜಿ ಅವರ ಸಿದ್ಧಾಂತ ಬಂಗಾಳವನ್ನು ನಾಶ ಮಾಡಿತು. ಕೃಷಿಕರ ವಿರುದ್ಧ ಅವರು ತೆಗೆದುಕೊಂಡ ಕ್ರಮಗಳು ನನ್ನನ್ನು ಘಾಸಿಗೊಳಿಸಿವೆ. ಕೃಷಿಕರ ಯೋಜನೆ ಬಗ್ಗೆ ಅವರೇಕೆ ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ?
ಮಂಡಿಗಳ ಬಗ್ಗೆ, ಎಪಿಎಂಸಿಗಳ ಬಗ್ಗೆ ಮಾತನಾಡುತ್ತಿರುವ ಗುಂಪು ಪಶ್ಚಿಮ ಬಂಗಾಳ, ಕೇರಳವನ್ನು ನಾಶ ಮಾಡಿರುವಂಥ ಗುಂಪು. ಕೇರಳದಲ್ಲಿ ಎಪಿಎಂಸಿ, ಮಂಡಿಗಳೇ ಇಲ್ಲ. ಕೇರಳದಲ್ಲಿ ಯಾಕೆ ಪ್ರತಿಭಟನೆ ನಡೆಯುತ್ತಿಲ್ಲ? ಅಲ್ಲಿ ಯಾಕೆ ಚಳವಳಿ, ಅಭಿಯಾನ ಶುರುಮಾಡುವುದಿಲ್ಲ. ಪಂಜಾಬಿನ ಕೃಷಿಕರನ್ನು ಯಾಕೆ ದಾರಿ ತಪ್ಪಿಸುತ್ತಿದ್ದಾರೆ?
ಪಿಎಂ ಕಿಸಾನ್ ಎಂಬುದು ಅರ್ಹ ರೈತರಿಗೆ ವಾರ್ಷಿಕ 6,000 ರೂಪಾಯಿ ನೆರವನ್ನು ಮೂರು ಸಮಾನ ಕಂತುಗಳಲ್ಲಿ ಪಾವತಿಸುವ ಯೋಜನೆಯಾಗಿದೆ. ಈ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಸರ್ಕಾರ ವರ್ಗಾಯಿಸುತ್ತದೆ.