ನವದೆಹಲಿ: ದೆಹಲಿಯ ಗಡಿ ಭಾಗದಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಒಗ್ಗಟ್ಟು ತೋರುವ ನಿಟ್ಟಿನಲ್ಲಿ ರೈತನೊಬ್ಬ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂಗು ಗಡಿಯಲ್ಲಿ ನಡೆದಿದೆ. ರೈತರ ದುಸ್ಥಿತಿಯನ್ನು ನೋಡಲಾಗದೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟ ರೈತ ಸಾವಿಗೆ ಶರಣಾಗಿದ್ದಾನೆ.
ಹರಿಯಾಣದ ಕರ್ನಾಲ್ನ ಸಂತ ಬಾಬಾ ರಾಮ್ಸಿಂಗ್ ಮೃತ ದುರ್ದೈವಿ. ಈತ ಕರ್ನಾಲ್ನ ಎಸ್ಜಿಪಿಸಿ ಮುಖಂಡನಾಗಿದ್ದ. ಈತನಿಗೆ ಕರ್ನಾಲ್ ಮತ್ತು ಸುತ್ತಮುತ್ತ ದೊಡ್ಡ ಪ್ರಮಾಣದ ಅನುಯಾಯಿಗಳಿದ್ದರು ಎನ್ನಲಾಗಿದೆ.
ರಾಮ್ಸಿಂಗ್ನ ದೇಹದ ಬಳಿಯೇ ಆತ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದೆ. ‘ರೈತರ ದುಸ್ಥಿತಿ ಮತ್ತು ಸರ್ಕಾರದ ದಬ್ಬಾಳಿಕೆಯಿಂದಾಗಿ ನಾನು ನೊಂದಿದ್ದೀನಿ. ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೆಣಗಾಡುತ್ತಿರುವ ರೈತರ ದುಃಸ್ಥಿತಿಗೆ ನಾನು ಸಾಕ್ಷಿಯಾಗಿದ್ದೇನೆ. ಸರ್ಕಾರವು ಅವರಿಗೆ ನ್ಯಾಯ ನೀಡುತ್ತಿಲ್ಲ ಎಂದು ನನಗೆ ನೋವಾಗಿದೆ. ಇದು ದೊಡ್ಡ ಅಪರಾಧ. ನನ್ನ ಆತ್ಮಹತ್ಯೆ ಸರ್ಕಾರದ ದಬ್ಬಾಳಿಯೆ ವಿರುದ್ಧದ ಧ್ವನಿಯಾಗಿದೆ’ ಎಂದು ಡೆತ್ನೋಟ್ನಲ್ಲಿ ಬರೆಯಲಾಗಿದೆ.