ಬೆಂಗಳೂರು : ಕೊರೊನಾ ಭೀತಿಯ ನಡುವೆ ರಾಜ್ಯದಲ್ಲಿ ಕಾಲೇಜು ಆರಂಭವಾಗಿದೆ. ನವೆಂಬರ್ 17 ರಿಂದ ಕಾಲೇಜುಗಳು ಆರಂಭಗೊಂಡಿದೆ. ಆದರೆ ಶಾಲೆ ಆರಂಭಕ್ಕೆ ಮಾತ್ರ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಶಾಲೆ ಪುನಾರಂಭ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಶಾಲೆ ಪುನಾರಂಭಕ್ಕೆ ದಿನಾಂಕ ಪ್ರಕಟವಾಗಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಶೀಘ್ರದಲ್ಲೇ 10 ಹಾಗೂ 12 ನೇ ತರಗತಿ ಪ್ರಾರಂಭ ಮಾಡಲಿದ್ದೇವೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು, ಈ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿ ದಿನಾಂಕ ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಇದರ ನಡುವೆ ಶಾಲೆಗೆ ಸೇರದ ಮಕ್ಕಳಿಗೆ ಶಾಲೆಗೆ ಸೇರಲು ಮತ್ತೊಂದು ಅವಕಾಶ ಕೂಡ ಕಲ್ಪಿಸಲಾಗುತ್ತಿದೆ. ಕೊರೊನಾ ಭೀತಿ ಹಿನ್ನೆಲೆ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಲು ಪೋಷಕರಿಗೆ ಸರ್ಕಾರ ಮತ್ತೊಂದು ಅವಕಾಶ ಕಲ್ಪಿಸುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.