ಇದು 80 ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿರೋ ಗ್ರಾಮ. ಆದ್ರೆ ಈಗ್ಲೂ ಸಹ ಈ ಗ್ರಾಮದಲ್ಲಿ ಯಾವುದೇ ಬಗೆಯ ಮೂಲಸೌಕರ್ಯ ಇಲ್ಲ. ಅಂದ್ ಹಾಗೆ ನಾವು ಹೇಳ್ತಿರೋದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಬಳಿಯ ನಾರಾಯಣಾಪುರ ಗ್ರಾಮದ ಬಗ್ಗೆ. ೮೦ ವರ್ಷವಾದ್ರೂ ಈ ಗ್ರಾಮವನ್ನು ಕಂದಾಯ ಗ್ರಾಮ ಅಂತ ಘೋಷಣೆ ಮಾಡಿಲ್ಲ. ಗ್ರಾಮದಲ್ಲಿ 5ನೇ ತರಗತಿವರೆಗೆ ಶಾಲೆ ಇದೆ. ನಂತರದ ತರಗತಿಗಳಿಗೆ ದೂರದ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದು. ಹೀಗಾಗಿ ಈ ಗ್ರಾಮದ ಜನ್ರೆಲ್ಲ ಸೇರಿ ಈಗ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಕೆಲ ಮಹಿಳೆಯರಂತೂ ತಮ್ಮ ಸ್ಥಿತಿ ನೆನೆದು ಕಣ್ಣೀರಿಡ್ತಿದ್ದಾರೆ. ಗ್ರಾಮದಲ್ಲಿ ಇವರು ವಾಸಿಸೋ ಮನೆಗಳೂ ಇವರ ಹೆಸರಲ್ಲಿ ಇಲ್ಲ. ಚುನಾವಣೆ ಸಂದರ್ಭದಲ್ಲಿ ಜನ ಪ್ರತಿನಿಧಿಗಳು ಇವರ ಮನೆಗೆ ಭೇಟಿ ನೀಡಿ ಮತಯಾಚಿಸ್ತಾರೆ. ನಂತರ ಆ ಕಡೆ ಸುಳಿಯೋದೇ ಇಲ್ಲ. ಹೀಗಾಗಿ ರಾಜಕಾರಣಿಗಳಿಗೆ ಮತ ಏಕೆ ಹಾಕಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆ.
