ಸಮ್ಮಿಶ್ರ ಸರ್ಕಾರ ಇಂದೇ ಕೊನೆಗೊಳ್ಳಲಿದೆ : ಬಿಎಸ್ವೈ

ಬೆಂಗಳೂರು : ಗುರುವಾರ ನಡೆದ ಕಲಾಪದಲ್ಲಿ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಯದೆ ಕಲಾಪವನ್ನು ಒಂದು ದಿನ ಮುಂದೂಡಲಾಗಿದ್ದು , ಈ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ನಡೆಸಿದರು.
ಇಂದು ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಇಂದೇ ವಿಶ್ವಾಸ ಮತದ ಮೇಲೆ ಮತ ವಿಭಜನೆ ನಡೆಯಲಿದೆ ಎಂದು ಎಲ್ಲ ಶಾಸಕರಿಗೂ ಸಂದೇಶ ಕಳುಹಿಸಲಾಗಿದೆ ಎಂದರು. ಬಿಜೆಪಿ ಸದಸ್ಯರ ಬಲ 105 ಇದ್ದು, ಮೈತ್ರಿ ಸರ್ಕಾರದ ಸದಸ್ಯರ ಬಲ 98ಕ್ಕೆ ಇಳಿದಿದೆ. ದೇವರ ದಯದಿಂದ ನೂರಕ್ಕೆ ನೂರು ಅವರ ವಿಶ್ವಾಸ ಮತಕ್ಕೆ ಹಿನ್ನಡೆಯಾಗಲಿದ್ದು ಬಹುಶಃ ಮೈತ್ರಿ ಸರ್ಕಾರದ ಆಡಳಿತ ಇಂದೇ ಕೊನೆಗೊಳ್ಳಲಿರುವುದಾಗಿ ಭಾವಿಸಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರೊಂದಿಗೆ ಪರಂ ಚರ್ಚೆ :
ಆಹೋರಾತ್ರಿ ಧರಣಿ ನಡೆಸಿದ ಹಿನ್ನಲೆಯಲ್ಲಿ ಬಿಜೆಪಿ ನಾಯಕರ ಜೊತೆ ಡಿಸಿಎಂ ಜಿ.ಪರಮೇಶ್ವರ್ ಚರ್ಚೆ ನಡೆಸಿದರು. ವಿರೋಧ ಪಕ್ಷದ ನಾಯಕರೊಂದಿಗೆ ವಿಧಾನಸೌಧದ ಮೊಗಸಾಲೆಗೆಯಲ್ಲಿ ಪರಂ ಕೆಲಕಾಲ ಚರ್ಚೆ ಮಾಡಿದರು. ಅಲ್ಲದೇ ಬಿಜೆಪಿ ಶಾಸಕರ ಜೊತೆಯಲ್ಲೇ ಉಪಹಾರವನ್ನೂ ಸೇವಿಸಿದರು.
