ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ರಾಜ್ಯದ 105 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ. ಇಂದು ಚಿಕ್ಕಬಳ್ಳಾಪುರ ರಾಜ್ಯಕ್ಕೆ ದೊಡ್ಡ ಶಾಕ್ ನೀಡಿದ್ದು ಬರೋಬ್ಬರಿ 45 ಜನರಲ್ಲಿ ಸೋಂಕು ದೃಢವಾಗಿದೆ. ಇವರಲ್ಲಿ ಬಹುತೇಕ ಎಲ್ಲರೂ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ್ದು, ಅವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಅದ್ರಲ್ಲೂ ಗೌರಿಬಿದನೂರು ಒಂದರಲ್ಲೇ ಹೆಚ್ಚು ಜನರಲ್ಲಿ ಸೋಂಕು ದೃಢವಾಗಿದ್ದು ಬೆಚ್ಚಿ ಬೀಳಿಸುವಂತಾಗಿದೆ.
17 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 588ಕ್ಕೆ ಏರಿದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೊರೊನಾ ಕಾರಣದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಆದ್ರೆ ಇಲ್ಲಿ ತನಕ 41 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದಂತಾಗಿದೆ. ಅಲ್ಲದೇ ಒಬ್ಬ ಸೋಂಕಿತ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ಒಟ್ಟು ಸಂಖ್ಯೆ 42 ಆದಂತಾಗಿದೆ.
ಇನ್ನು ಇಂದು ಸೋಂಕು ಪತ್ತೆಯಾದವರಲ್ಲಿ 10 ವರ್ಷದ ಒಳಗಿನ 7 ಮಕ್ಕಳಿದ್ದರೆ, 41 ಜನ ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಇಂದು ಪತ್ತೆಯಾದ 105 ಕೇಸ್ಗಳಲ್ಲಿ ಬರೋಬ್ಬರಿ 83 ಕೇಸ್ಗಳಿಗೆ ನೇರವಾಗಿ ಮುಂಬೈ ನಂಟಿದೆ.